
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಜನರ ಸಂಕಷ್ಟಗಳನ್ನು ಅರಿತುಕೊಳ್ಳುವುದು 1300 ಕಿ.ಮೀ.ಗಳ ಎರಡನೆಯ ಹಂತದ ತಮ್ಮ ಪಾದಯಾತ್ರೆಯ ಗುರಿಯಾಗಿದೆ ಎಂದು ರಾಮುಲು ಹೇಳಿದ್ದಾರೆ. BSR Congress (ಬಡವರ, ಶ್ರಮಿಕರ, ರೈತರ ಪಕ್ಷ) ಅಧಿನಾಯಕ 'ಸ್ವತಂತ್ರ ಹಕ್ಕಿ' ಬಿ. ಶ್ರೀರಾಮುಲು ಕಾರವಾರದಿಂದ- ರಾಮನಗರದವರೆಗೆ ತಮ್ಮ ಎರಡನೆಯ 'ಸ್ವಾಭಿಮಾನಿ ಸಂಕಲ್ಪ ಯಾತ್ರೆ' ಹಮ್ಮಿಕೊಂಡಿದ್ದಾರೆ. ಮೊದಲ ಹಂತದಲ್ಲಿ ಬೀದರ್ ನಿಂದ ಬೆಂಗಳೂರು ವರೆಗೆ ಬರ ಪೀಡಿತ ಭಾಗಗಳಲ್ಲಿ ಪ್ರಯಾಣ ಮಾಡಿದ್ದ ರಾಮುಲು ಜನರ ಸಂಕಷ್ಟ ಅರಿತುಕೊಳ್ಳಲು ಯತ್ನಿಸಿದ್ದರು.
ಆದರೆ ರಜಾ ದಿನವಾದ ಭಾನುವಾರ ರಾಮುಲು ಅವರು ತಮ್ಮ ಎರಡನೆಯ ಪಾದಯಾತ್ರೆಗೆ ನಟಿ ರಕ್ಷಿತಾ ಸಮ್ಮುಖದಲ್ಲಿ ಚಾಲನೆ ನೀಡಿದರಾದರೂ ಸ್ಥಳೀಯರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ನಿರೀಕ್ಷಿತ ಸಂಖ್ಯೆಯಲ್ಲಿ ಜನ ಸಭೆಗೆ ಬರಲಿಲ್ಲ. ಇನ್ನು ಸಭೆಗೆ ಬಂದಿದ್ದ ನೂರಾರು ಮಂದಿಯ ಕಣ್ಣುಕುಕ್ಕಿದ್ದು ರಾಮುಲು7 ಅವರ ಐಷಾರಾಮಿ ಬಸ್. ರಾಮುಲು ಭಾಷಣಕ್ಕಿಂತ ಜನ ಅವರ ಬಸ್ಸಿನ ಮೇಲೆ ಮುಗಿಬಿದ್ದು ಕುತೂಹಲದಿಂದ ವೀಕ್ಷಿಸಿದರು.
ತಮ್ಮ ವೈಭವೋಪೇತ ಬಸ್ಸಿಗೆ ಹೊಸದಾಗಿ ಬಣ್ಣ (ಪಕ್ಷದ ಬಾವುಟದಲ್ಲಿರುವ ಬಣ್ಣಗಳು) ಬಳಿದಿರುವ ರಾಮುಲು ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸಲು ವಿಫಲರಾದರು. ಜತೆಗೆ, ಸ್ಥಳೀಯರಿಗೆ ರಾಜಕೀಯ ಸಭೆಗಳು ವರ್ಜ್ಯ.
ಇನ್ನು ಈ ಪಾಟಿ ಧಾಂಧೂಮ್ ಅಂತ ಸಭೆ ನಡೆಸಿದರೆ ಜನ ಅದನ್ನು ಒಪ್ಪಿಕೊಳ್ಳುವುದಿಲ್ಲ' ಎಂದು ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟರು. ಆದರೆ ಬಳ್ಳಾರಿ, ಗದಗ, ಕೊಪ್ಪಳ, ಧಾರವಾಡ ಮತ್ತು ಬೆಳಗಾವಿಯಿಂದ ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದ ರಾಮುಲು ಅಭಿಮಾನಿಗಳು ಸಭೆಗೆ ಒಂದಷ್ಟು ಕಳೆ ತಂದರು.
ಕರಾವಳಿಯ ರಾಜಕೀಯ ಚಿತ್ರಣವೇ ಬೇರೆ ಬಯಲು ಸೀಮೆಯ ರಾಜಕೀಯವೇ ಬೇರೆ. ಅಲ್ಲಿ ರಾಮುಲು ಅವರನ್ನು ದೇವರು ಎಂದು ಪೂಜಿಸಬಹುದು. ಆದರೆ ಇಲ್ಲಿ ಅವರಿಗೆ ಅಷ್ಟೆಲ್ಲ ಬೆಂಬಲ ಸಿಗುವುದು ದೂರದ ಮಾತು ಎಂದು ಅವರು ರಾಮುಲು ಅವರ ಪಾದಯಾತ್ರೆಗೆ ಕನ್ನಡಿ ಹಿಡಿದರು.
